ಕೊಳಚೆ ನಿರ್ಮೂಲನ ಮಂಡಳಿಯಲ್ಲಿನ ಸಂದರ್ಶನಕ್ಕಾಗಿ ವಿದ್ಯಾ ಕುಮಾರ್ ಬೆಳಗ್ಗೆ 9 ಕ್ಕೆ ಅಣಿಯಾಗಿ ಬಂದು ಕಚೇರಿಯ ಬಾಗಿಲ ಬಳಿ ಒಂದು ಗಂಟೆ ಕಾದರು ಯಾರು ಕಾಣುವುದಿಲ್ಲ. ತಾನು ವಿಳಾಸ ತಪ್ಪಿ ಬೇರೆಲ್ಲೋ ಬಂದಿರಬೇಕು ಎಂದು ಅನುಮಾನಿಸಿ ಹೊರಡಬೇಕೆನ್ನುವಷ್ಟರಲ್ಲಿ ಜಾವನ ಜಬ್ಬಾರ್ ಪ್ರತ್ಯಕ್ಷನಾಗುತ್ತಾನೆ. ಆದೆ ಕೊಳಚೆ ನಿರ್ಮೂಲನ ಮಂಡಳಿಯಂದು, ಆ ದಿನವೇ ಅಲ್ಲಿ ಸಂದರ್ಶನವಿರುವುದೆಂದು ಜಬ್ಬಾರನಿಂದ ಖಚಿತವಾದ ಮೇಲೆ ಒಳ ನಡೆಯುತ್ತಾನೆ. ಅದು ಅವನಿಗೆ ಕೆಲವು ಸರ್ಕಾರಿ ಕಛೇರಿಗಳ ಪಾಡು ಏನೆಂದು ಅರ್ಥವಾಗುತ್ತದೆ.
೧೦-೧೫ ಕ್ಕೆ ಮಂಡಳಿಯ ಅಧ್ಯಕ್ಷ ಉದರಪೂರ್ಣರ ಆಗಮನವಾಗುತ್ತದೆ. ತಮ್ಮ ಕೋಟನ್ನು ಕುರ್ಚಿಗೆ ಹೊದ್ದಿಸಿ, ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಟ್ಟು ಬೆಳೆಸಿದ ತಮ್ಮ ಹೊಟ್ಟೆಯನ್ನು ಚಂದದಿಂದ ಸವರಿಕೊಂಡು ಆಸನ ಮೇಲೆ ವರಗುತ್ತಾನೆ. ಜಬ್ಬಾರನಿಂದ ಒಂದು ಕಡಕ್ ಚಹಾ ತರಿಸಿ ಕುಡಿದು ಮುಗಿಸುವಷ್ಟರಲ್ಲಿ ಮಂಡಳಿಯ ಹಿರಿಯ ಗುಮಾಸ್ತ, ಸುಡುಗಾಡು ಸೀತಾರಾಮು 'ಥೂ! ಹಾಳು ಸುಡುಗಾಡು, ಏನು ಕೆಲ್ಸನೂ ಏನು ಜನಗಳೋ. ಈ ಅಧ್ಯಕ್ಷರದ್ದು ಬೇರೆ ಸುಡುಗಾಡು ಕಿರಿಕಿರಿ' ಎಂದು ಗೊಣಗಿಕೊಂಡು ಪ್ರವೇಶಿಸುತ್ತಾನೆ. ಆ ದಿನ ನಡೆಯಬೇಕಿರುವ ಸಂದರ್ಶನಕ್ಕೆ ಮಂದಾಕಿನಿಯವರು ಏಕೆ ಇನ್ನು ಬಂದಿಲ್ಲವೆಂದು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುವಾಗ ಮೇಕಪ್ ಮಂದಾಕಿನಿಯವರು ಬೆಕ್ಕಿನ ನೆಡಿಗೆಯೊಂದಿಗೆ ತಮ್ಮ ಮೇಕಪ್ ಸರಿ ಪಡಿಸಿಕೊಳ್ಳುತ್ತಾ ಆಗಮಿಸುತ್ತಾರೆ. ತಮ್ಮ ಮನೆಯ ನಾಯಿಯ ಮದುವೆ ವಾರ್ಷಿಕೋತ್ಸವದ ಸಿಹಿ ಹಂಚುತ್ತಾ ತಡವಾಗಿ ಬಂದ ಕಾರಣ ತಿಳಿಸುತ್ತಾಳೆ. ಆ ಸಿಹಿಯನ್ನು ಕೊಂಚ ಅಸಹ್ಯವಾದರೂ ಸಹಿಸಿಕೊಂಡು ಇಬ್ಬರು ತಿನ್ನುತ್ತಾರೆ. ಅಷ್ಟರಲ್ಲಿ ಮಂದಾಕಿನಿ ಒಮ್ಮೆ ತಮ್ಮ ಮೇಕಪ್ ಸರಿಯಿದೆಯೇ ಎಂದು ತಮ್ಮ ಕಿರುಗನ್ನದಿಯಲ್ಲಿ ಪರೀಕ್ಷಿಸಿ ಕೊಳ್ಳುತ್ತಾಳೆ. ಈ ಎಲ್ಲಾ ತಮಾಷೆಯನ್ನು ವಿದ್ಯಾಕುಮಾರ ದೂರದಿನಲೇ ನೋಡಿ ನಿಟ್ಟುಸಿರು ಬಿಡುತ್ತಾನೆ.
ತಮ್ಮ ಮಾತುಗಳನ್ನು ಅಲ್ಲಿಗೆ ನಿಲ್ಲಿಸಿ ಸಂದರ್ಶನ ಶುರು ಮಾಡಲು ಮೂವರು ಅಣಿಯಾಗುತ್ತಾರೆ. 'ಏನು ಸಂದರ್ಶನನೋ, ಸುಡುಗಾಡು ಅಭ್ಯರ್ಥಿಗಳೋ...! ನಡೀರಿ ಅದೇನು ಸುಡುಗಾಡು ಸಂದರ್ಶನ ಮಾದೆಬಿಡೋಣ' ಎಂದು ಸೀತಾರಾಮು ಸಿಡುಕುತ್ತಾನೆ. ಉದರಪೂರ್ಣ 'ಒಬ್ಬೊಬ್ಬರನ್ನೇ ಒಳಗೆ ಕಳ್ಸೋ ಜಬ್ಬಾರ' ಎಂದು ಆಜ್ಞೆ ಕೊಡುತ್ತಾನೆ. 'ಇರೋದೇ ಒಬ್ಬ ಒಬ್ಬೊಬ್ಬರನ್ನ ಬೇರೆ ಕರಿಬೇಕಂತೆ!' ಎಂದು ಮನಸ್ಸಿನಲ್ಲೇ ಗೊಣಗಿಕೊಂಡು ಜಬ್ಬಾರ ವಿದ್ಯಾಕುಮಾರನ ಹೆಸರು ಕೂಗುತ್ತಾನೆ. ಕಡೆಗೂ ತನ್ನ ಸರತಿ ಬಂತೆಂದು ಖುಷಿಯಿಂದ ಒಳಹೊಗುತ್ತಾನೆ. ಅವನನ್ನು ಕೂರಿಸುವ ಮುಂಚೆಯೇ 'ಹ್ಞೂ ಏನು ನಿನ್ನ ಹೆಸರು? ಏನು ಓದಿದ್ಯ?' ಎಂದು ಸೀತಾರಾಮು ಪ್ರಶ್ನೆ ಮಳೆ ಸುರಿಸುತ್ತಾನೆ. ಉತ್ತರಿಸಲು ಬಾಯಿ ಬಿಡುವ ಹೊತ್ತಿಗೆ ಭರ್ರನೆ ಬಂದ ಮಂತ್ರಿ ಕುಮಾರ ಅವನನ್ನು ತಳ್ಳಿಕೊಂಡು ಒಳನುಗ್ಗುತ್ತಾನೆ. ಜಬ್ಬಾರನು ಹಿಂದೆಯೇ ಓಡಿ ಬರುತ್ತಾನೆ. 'ನಮಸ್ಕಾರ ನಮಸ್ಕಾರ ನಮಸ್ಕಾರ, ನಿಶ್ಚಿಂತೆ ಮಾಡ್ಕೋಬೇಡಿ ನನ್ನ ಪರಿಚಯ ನಾನೇ ಮಾಡ್ಕೊತೀನಿ' ಮಂತ್ರಿಕುಮಾರ ತನ್ನ ಪರಿಚಯ ಶುರು ಮಾಡುತ್ತಾನೆ. 'ನಾನು ಒಳಚರಂಡಿ ಖಾತೆ ಸಚಿವರ ಹತ್ತಿರದ ಸಂಬಂಧಿ, ದೂರದ ತಮ್ಮ ಆಗ್ಬೇಕು.' ಅಷ್ಟು ಪರಿಚಯವಾಗುತ್ತಿದ್ದಂತೆ ಉದರಪೂರ್ಣ ವಿದ್ಯಾಕುಮಾರನನ್ನು 'ಆಮೇಲೆ ಕರಿತೀನಿ ಅಲ್ಲಿವರೆಗೂ ಆಚೆ ಕೂತಿರು'ಎಂದು ವಿದ್ಯಾಕುಮಾರನನ್ನ ಹೊರಗೆ ದೂಡುತ್ತಾನೆ. 'ಮಂತ್ರಿಗಳು ಈ ಕೆಲಸ ನಂಗೆ ಕೊಡಿಸ್ತೀನಿ ಮಾತು ಕೊಟ್ಟವ್ರೆ. ಈಗ ನೋಡಿ ಇನ್ನೇನು ಅವ್ರು ಕರೆ ಮಾಡೆಬಿಡ್ತಾರೆ. ಒಂದು-ಎರಡು-ಮೂರು...' ಅನ್ನುತ್ತಿದ್ದಂತೆ ಕಚೇರಿಯ ದೂರವಾಣಿ ರಿಂಗಣಿಸುತ್ತದೆ. ಉದರಪೂರ್ಣ ಅದಕ್ಕೆ 'ನಮಸ್ಕಾರ, ಅಧ್ಯಕ್ಷ ಉದರಪೂರ್ಣ ಸ್ಪೀಕಿಂಗು' ಎಂದು ತುಸು ಇಂಗ್ಲಿಷ್ ಸೇರಿಸಿಯೇ ಉತ್ತರಿಸುತ್ತಾನೆ. ಅತ್ತ ಕಡೆಯಿಂದ 'ಈಗ ಬಂದಿರೋ ಹುಡುಗ ನಮ್ಮ ಮಂತ್ರಿಗೆ ಹತ್ತಿರದ ಸಂಬಂಧ ದೂರದ ಬ್ರದರ್ರು. ಈ ಕೆಲಸ ಅವನಿಗೆ ಕೊಡಿ. ಕೆಲಸ ಮುಗಿದ ಮೇಲೆ ಬಂದು ಮಂತ್ರಿಗಳನ್ನ ಬಂದು ನೋಡಬೇಕಂತೆ' ಎಂದು ಮಂತ್ರಿಗಳ ಖಾಸಗಿ ಸಹಾಯಕ ತಿಳಿಸುತ್ತಾನೆ. ಸಂದರ್ಶನ ಮಾಡಲು ಕುಳಿತಿದ್ದ ಮೂರು ಜನ ಮಂತ್ರಿಕುಮಾರನ ಕುಶಲ ವಿಚಾರಿಸಿ ಬೀಳ್ಕೊಡುತ್ತಾರೆ. 'ವಿದ್ಯಗಮಾರನ್ನ ಕರೆಯಪ್ಪ' ಎಂದು ಮಂದಾಕಿನಿ ತನ್ನ ಮೆಕಪನ್ನು ಮತ್ತೆ ಸರಿ ಮಾಡಿಕೊಳ್ಳುತ್ತ ಜಬ್ಬಾರನಿಗೆ ಹೇಳುತ್ತಾಳೆ. 'ಅಯ್ಯೋ ಅವ್ನು ಗಮಾರ ಅಲ್ಲ ಕುಮಾರ ಕಣ್ರೀ' ಎಂದು ಉದರಪೂರ್ಣ ಮಂದಾಕಿನಿಯನ್ನ ತಿದ್ದುತ್ತಾರೆ. 'ಗಮಾರನೋ ಕುಮಾರನೋ ಕರೀರಿ ಅವನ್ನ' ಎಂದು ಸೀತಾರಾಮು ಮತ್ತೆ ಸಿಡುಕುತ್ತಾನೆ.
ಈ ಗಲಾಟೆಯ ಮಧ್ಯದಲ್ಲಿ ಕ್ಯಾಶ್ ಕುಮಾರಿ ಕಂತೆ ನೋಟಿನಲ್ಲಿ ಗಾಳಿ ಬೀಸಿಕೊಳ್ಳುತ್ತ ವಿದ್ಯಾಕುಮಾರನ ಪಕ್ಕ ಬಂದು ಕೂರುತ್ತಾಳೆ. ವಿದ್ಯಾಕುಮಾರನನ್ನು ಕರೆಯಲು ಬಂದ ಜಬ್ಬಾರನಿಗೆ ಹಾಗೆಯೇ ಒಂದು ನೂರರ ನೋಟನ್ನು ಎಸೆಯುತ್ತಾಳೆ ಅದನ್ನು ಆಯ್ದುಕೊಂಡ ಜಬ್ಬಾರ ಒಳಗೆ ಹೋಗಿ 'ಸಾರ್, ಆ ವಿದ್ಯಾಕುಮಾರ ಎಲ್ಲೋ ಹೋಗವನೆ ಇನ್ನೊಬ್ರು ಇದ್ದಾರೆ ಕಳಿಸ್ತೀನಿ' ಎಂದು ಕ್ಯಾಶ್ ಕುಮಾರಿಯನ್ನ ಒಳ ಕಳುಹಿಸಿ, ಅಲ್ಲೇ ಇದ್ದರು ಇಲ್ಲವಾಗಿದ್ದ ವಿದ್ಯಕುಮಾರನನ್ನ ಸಮಾಧಾನ ಪಡಿಸುತ್ತಾನೆ. ಇತ್ತ ಒಳ ಬಂದು ಕುಳಿತ ಕ್ಯಾಶ್ ಕುಮಾರಿಯನ್ನ ಮೂರು ಜನ ಸಂದರ್ಶನಕಾರರು ಪ್ರಶ್ನಿಸಲು ಮುಂದಾಗುತ್ತಾರೆ. 'ನಾನು ಕ್ಯಾಶ್ ಕುಮಾರಿ, ನಮ್ಮ ಅಪ್ಪನ ಹತ್ರ ತುಂಬಾ ದುಡ್ಡಿದೆ. ಮನೆನಲ್ಲಿ ತುಂಬಾ ಬೇಜಾರು ಹೊಡಿತ ಇತ್ತು, ಕಾಲ ಕಳ್ಯೋಕೆ ಏನಾದ್ರೂ ಮಾಡಬೇಕಲ್ಲ ಅದಕ್ಕೆ ಇಲ್ಲಿ ಕೆಲ್ಸಕ್ಕೆ ಸೇರೋಣ ಅಂತ ಬಂದೆ' ಎಂದು ತನ್ನ ಪ್ರಶ್ನೆಗಳು ಬರುವ ಪರಿಚೆಯ ಮಾಡಿಕೊಡುತ್ತಾಳೆ. ಮೇಜಿನ ಕೆಳಗೆ ಕೈ ಆಡಿಸಲು ಪ್ರಯತ್ನಿಸಿ, 'ಅಯ್ಯೋ ಇದೇನ್ರಿ ಈ ಮೇಜಿನ ಕೆಳಗೆ ಜಾಗನೇ ಇಲ್ಲ. ನಿಮ್ಮ ಕಛೇರಿಲಿ ಮಜಿನ ಕೆಳಗಿನ ವ್ಯವಹಾರ ನೆಡ್ಯೋದೆ ಇಲ್ವಾ?!' ಎಂದು ಕ್ಯಾಶ್ ಕುಮಾರಿ ಆಶ್ಚರ್ಯದಿಂದ ಉದ್ಗರಿಸುತ್ತಾಳೆ. ಅದಕ್ಕೆ ಉದರಪೂರ್ಣ 'ಛೆ ಛೆ ಹಾಗೇನಿಲ್ಲ. ಈಗ ಲೋಕಾಯುಕ್ತರ ಕಾಟ ಜಾಸ್ತಿ ಆಗಿದೆ ನೋಡಿ ಅದಕ್ಕೆ ಎಲ್ಲಾ ಈ ಥರದ ಮೆಜನ್ನೇ ಹಾಕ್ಸಿದ್ದಿವಿ. ಆ ವಿಚಾರ ಆದ್ರೆ ಕೆಳಗೆ ಚಹಾ ಅಂಗಡಿಯಲ್ಲಿ ಹೋಗಿ ತಲುಪಿಸಿ ಬಿಡಿ. ನಾವು ನಂತರ ತಗೊತೀವಿ.' ಎಂದು ತಮ್ಮ ಬುದ್ಧಿವಂತಿಕೆಯ ಹೊಸ ಯೋಜನಗಳನ್ನು ಹೇಳುತ್ತಾರೆ. ಅಲ್ಲಿಯವರೆಗೂ ಅವರ ಸೀರೆ, ಒಡವೆಯ ಮೇಲೆ ಕಣ್ಣು ಇಟ್ಟಿದ್ದ ಮಂದಾಕಿನಿ ಕಡೆಗೂ ಬಾಯಿ ಬಿಟ್ಟು ಕೇಳಿಯೇ ಬಿಡುತ್ತಾಳೆ, 'ರೀ ರೀ, ಈ ಸೀರೆ ಎಲ್ಲಿ ತಗೊಂಡ್ರಿ? ಹೊಸ ಥರ ಇದೇ!'. 'ಒಹ್! ಇದು ಹೊಸ ವಿನ್ಯಾಸ. _________ ಸೀರೆ ಅಂತ' ಎಂದು ಸೌಂದರ್ಯ ವರ್ಧಕ ವಸ್ತುಗಳ ಬಗ್ಗೆ ಮಂದಾಕಿನಿ ಮತ್ತು ಕ್ಯಾಶ್ ಕುಮಾರಿ ಮಾತಿಗಿಳಿಯುತ್ತಾರೆ. ಇದರಿಂದ ರೇಗಿ ಹೋದ ಸೀತಾರಾಮು 'ಅದೇನು ಹಾಳು ಸುಡುಗಾಡು ಎಲ್ಲಿ ಹೋದರು ಇದೇ ವಿಷ್ಯ ಮಾತಾಡ್ತೀರಲ್ಲ್ರಿ. ಥೂ ಹಾಳು ಸುಡುಗಾಡು' ಮಂದಾಕಿನಿಯ ಮೇಲೆ ಸಿಡುಕುತ್ತಾರೆ. 'ಸರಿ ನಾನು ಕೆಳಗಿನ ಅಂಗಡಿಯಲ್ಲಿ ನಿಮ್ಮ ದಕ್ಷಿಣೆ ತಲುಪಿಸಿ ಹೋಗ್ತೀನಿ' ಎಂದು ಮುನಿಸಿಕೊಂಡೆ ಕ್ಯಾಶ್ ಕುಮಾರಿ ಹೊರಡುತ್ತಾಳೆ.
ಈಗ ವಿದ್ಯಾಕುಮಾರನ ಸರತಿ. ಯಾರು ಅಡ್ಡ ಬರುತ್ತಿಲ್ಲವೆಂದು ಖಚಿತ ಪಡಿಸಿಕೊಂಡು, ಮತ್ತೊಮ್ಮೆ ಅಕ್ಕ ಪಕ್ಕ ನೋಡಿ, ವಿದ್ಯಾಕುಮಾರ ಒಳಹೊಗುತ್ತಾನೆ. 'ಸಂದರ್ಶನ ಶುರು ಮಾಡೋಣವೆ' ಎಂದು ಉದರಪೂರ್ಣ, ಮಂದಾಕಿನಿ ಮತ್ತು ಸೀತಾರಾಮು ಅವರಿಗೆ ಹೇಳುತ್ತಾರೆ. ಅಲ್ಲಿಯವರೆಗಿನ ಎಲ್ಲಾ ಕಥೆಗಳನ್ನು ಎದುರೆ ನೋಡಿದ ವಿದ್ಯಾಕುಮಾರ, 'ನೋಡಿ ಸಾರ್, ಸರ್ಕಾರಿ ಕಚೇರಿ ಕತೆಯೆಲ್ಲ ಹಿಂಗೆನೆ ಅಂತ ಗೊತ್ತು ಬಿಡಿ ಸಾರ್. ಇಲ್ಲಿ ಕೆಲಸ ಪಡ್ಯೋಕೆ ಒಂದು ದುಡ್ಡು ಬೇಕು ಇಲ್ಲ ಅಂದ್ರೆ ಪ್ರಭಾವಿ ವ್ಯಕ್ತಿಯ ಶಿಫಾರಸ್ಸು ಬೇಕು. ಅದೆಲ್ಲ ಗೊತ್ತಿದ್ರು ಇಲ್ಲಿ ಯಾಕೆ ಬಂದಿದ್ದೀನಿ ಗೊತ್ತ?!' ಎಂದು ಪ್ರಶ್ನೆ ಇಟ್ಟಾಗ ಮೂವರು ಸಂದರ್ಶಕರು ತಬ್ಬಿಬ್ಬಾಗಿ ನೋಡುತ್ತಾರೆ. ' ಇದು ನನ್ನ ನೂರೊಂದನೆ ಸಂದರ್ಶನ. ಇದು ಮುಗಿಸಿ ನಾನು ಗಿನ್ನಿಸ್ ದಾಖಲೆ ಮಾಡ್ತೀನಿ. ಅದರಿಂದ ಬಾರೋ ದುಡ್ಡಲ್ಲಿ ಬಡ್ಡಿ ವ್ಯಾಪಾರ ಮಾಡ್ಕೊಂಡು ನೆಮ್ಮದಿಯಾಗಿರ್ತೀನಿ. ಬರ್ಲಾ. ಹಾಂ, ನಿಮ್ಮ ಮಕ್ಕಳಿಗೆ ಕೆಲ್ಸಕ್ಕೆ ಸೇರ್ಸೋಕೆ ದುಡ್ಡು ಬೇಕಿದ್ರೆ ಬನ್ನಿ ಸ್ವಲ್ಪ ರಿಯಾಯಿತಿ ಮೇಲೆ ಸಾಲ ಕೊಡ್ತೀನಿ' ಎಂದು ಹೇಳಿ ಹೊರಟು ಹೋಗುತ್ತಾನೆ. ಮೂವರು ಸಂದರ್ಶಕರು ಇಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಾರೆ!!.